ವಿದೇಶ

ವಿದೇಶ

ಬೆಂಗಳೂರು

ಬೆಂಗಳೂರು

ಥೈಲಾಂಡ್

ಥೈಲಾಂಡ್

ಬಸ್ ಟಿಕೆಟ್ ಅಲ್ಲಿ ಕನ್ನಡ

ಯಲ್ಲಾಪುರದಲ್ಲಿ ಬಸ್ ಹತ್ತಿ ಟಿಕೆಟ್ ತೆಗೆದು ಕೊಂಡೆ. ಆಗ ಸುಮ್ಮನೆ ಟಿಕೆಟ್ ಗಮನಿಸಿದಾಗ ನನಗೆ ಆಶ್ಚರ್ಯ. ಯಾಕೆ ಹೀಗೆ ಅನ್ನುವ ಕುತೂಹಲ.ಈ ಟಿಕೆಟ್ ಒಮ್ಮೆ ಗಮನಿಸಿ. ಮೂರು ಕಾಸಿಗೆ ಪ್ರಯೋಜನ ಬಾರದ ವಿಷಯಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಪ್ರಯಾಣಿಕರಿಗೆ ನಿಜಕ್ಕೂ ಪ್ರಯೋಜನ ಆಗುವ ವಿಷಯ ಇಂಗ್ಲಿಷ್ ಅಲ್ಲಿವೆ.

ಇಂಗ್ಲಿಷ್ ಅಲ್ಲಿ ಏನಿವೆ?

  • ಎಲ್ಲಿಂದ ಎಲ್ಲಿಗೆ ಪ್ರಯಾಣ
  • ದೂರ
  • ಬಸ್ ಬಗೆ
  • ವರ್ಗಾವಣೆ ಸಾಧ್ಯ ಇಲ್ಲ ಅನ್ನುವ ಸೂಚನೆ
  • ಪೂರ್ತಿ ಅಥವಾ ಅರ್ಧ ಟಿಕೆಟ್ ಅನ್ನುವ ಮಾಹಿತಿ

ಕನ್ನಡದಲ್ಲಿ ಏನನ್ನು ಬರೆದಿದ್ದಾರೆ?

  • ವಾಕರಸಾಸಂ, ಹಳಿಯಾಳ
  • ಮೊತ್ತ ರೂ
  • ಮತದಾನ ನನ್ನ ಹಕ್ಕು. ಅದನ್ನು ನಾನು ಚಲಾಯಿಸುವೆ.

ಪ್ರಾಮಾಣಿಕತೆಯಿಂದ ಒಮ್ಮೆ ಕೂಲಂಕಶವಾಗಿ ಗಮನಿಸಿ. ಕನ್ನಡದಲ್ಲಿ ಪ್ರಯಾಣಿಕರಿಗೆ ಕಿಂಚಿತ್ ಉಪಯೋಗಕ್ಕೆ ಬಾರದ ವಿಷಯ ,ಇಂಗ್ಲಿಷ್ ಅಲ್ಲಿ ಉಪಯುಕ್ತ ಮಾಹಿತಿ. ಇಂದು ಕನ್ನಡಿಗರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತಿರುವದಕ್ಕೆ ಬರಿ ಉನ್ನತ ಶಿಕ್ಷಣ ಮಾತ್ರ ಕಾರಣ ಅಲ್ಲ. ಕನ್ನಡದಲ್ಲಿ ಬೇಕಾದ ಮಾಹಿತಿ ನೀಡದಿರುವದು ಕಾರಣ.

ಕನ್ನಡದ ಬಳಸಲು ನಮಗಿರುವ ಅಡ್ಡಿ ಏನು ಎನ್ನುವ ಪ್ರಶ್ನೆ ನನ್ನನ್ನು ಕಾಡಿದೆ. ನಿಮಗೆ?

ವಿ.ಸೂ: ನವೆಂಬರ್ ೧೫ ೨೦೧೪ರಲ್ಲಿ ವಿಸ್ಮಯನಗರಿ.ಕಾಂ ಅಲ್ಲಿ ರಾಜೇಶ ಹೆಗಡೆಯ ಈ ಲೇಖನ ಪ್ರಕಟ ಆಗಿತ್ತು.

ಬಿಎಂಟಿಸಿ ಬಸ್ ಮೇಲಿನ ಜಾಹೀರಾತಲ್ಲಿ ಕನ್ನಡದ ಕಣ್ಣಿಗೆ ಸುಣ್ಣ ಯಾಕೆ?

ಬೆಂಗಳೂರನಲ್ಲಿ ನಾನು ಬೈಕಲ್ಲಿ ಓಡಾಡುವಾಗ ಟ್ರಾಫಿಕ್ ಅಲ್ಲಿ ಕಾಯುತ್ತಿರುವಾಗ ನನ್ನ ಗಮನ ಸೆಳೆಯುವದು ಈ ಕನ್ನಡಕ್ಕೆ ದ್ರೋಹ ಬಗೆಯುವ ಬಿ.ಎಂ.ಟಿ.ಸಿ ಬಸ್ಸಿನ ಹಿಂದೆ ಹಾಕಿರುವ ಜಾಹೀರಾತುಗಳು. ಇಂಗ್ಲೀಷ್ ಅಲ್ಲಿ ಲೋಗೋ, ಮಾಹಿತಿ ಎಲ್ಲ ನೀಡುವ ಈ ಜಾಹೀರಾತುಗಳು ಕನ್ನಡದಲ್ಲಿ ಆ ಸಂದರ್ಭದಲ್ಲಿ ಅಗತ್ಯವೂ ಇಲ್ಲದ ಹಿತ ನುಡಿಗಳನ್ನು, ಸಾದಾ ಫಾಂಟಲ್ಲಿ ಕಂಪನಿ ಹೆಸರನ್ನು ಕನ್ನಡದಲ್ಲಿ ಬರೆದು ಮುಗಿಸುತ್ತಿವೆ.

ಜಾಹೀರಾತಲ್ಲಿ ಕನ್ನಡದಲ್ಲಿ ಬರೆಯುವ ಕೆಲವು ಗಾದೆ ಮಾತುಗಳು ಹೀಗಿವೆ.

ವಿದ್ಯಾ ದಾನ ಮಹಾ ದಾನ,

ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ,

ಗಿಡಮರ ಬೆಳೆಸಿ ಪರಿಸರ ಉಳಿಸಿ,

ಕೈ ಕೆಸರಾದರೆ ಬಾಯಿ ಮೊಸರು  

ನನ್ನ ಪ್ರಶ್ನೆ ಇಷ್ಟೇ. ಕನ್ನಡದಲ್ಲಿ ಜಾಹೀರಾತಿನ ಮಾಹಿತಿ ಬರೆಯುವದನ್ನು ಬಿಟ್ಟು ಇವುಗಳನ್ನು ಬರೆಯುವದು ಯಾಕೆ? ನಾವು ಮುಂದಿನ ಪೀಳಿಗೆಗೆ ಈ ಮೂಲಕ ಏನು ಸಂದೇಶ ಕೊಡ ಬಯಸುತ್ತೇವೆ? ಕನ್ನಡ ಕೇವಲ ಗಾದೆ ಮಾತು, ಸಾಹಿತ್ಯದ ಭಾಷೆ. ಇಂಗ್ಲೀಷ್ ಮಾಹಿತಿ ಭರಿತ ಭಾಷೆ ಎಂದೇ? 

ಪ್ರಾಮಾಣಿಕವಾಗಿ ವಿಚಾರ ಮಾಡಿ. ಈ ತರಹ ನಡವಳಿಕೆ ನಮ್ಮ ಕನ್ನಡವನ್ನು ಅಪ್ರಸ್ತುತ ಭಾಷೆಯಾಗಿ ಮಾಡುತ್ತದೆ. ಓದದಿದ್ದರೂ ಯಾವುದೇ ನಷ್ಟ ಇರದ ಮಾಹಿತಿ ಕನ್ನಡದಲ್ಲಿದೆ. ಇಂಗ್ಲೀಷ್ ಅಲ್ಲಿ ಮಾಹಿತಿಯ ಕಣಜವೇ ಈ ಜಾಹೀರಾತಲ್ಲಿದೆ.

ನಿಮ್ಮ ಅನಿಸಿಕೆ ಏನು? 

ಬೈಕ್ ಇಂದ ಮೊಬೈಲ್ ಅಲ್ಲಿ ತೆಗೆದ ಒಂದೆರಡು ಜಾಹೀರಾತಿನ ಸ್ಯಾಂಪಲ್ ನೀಡಿದ್ದೇನೆ.ಇಂತಹ ಹಲವಾರು ಜಾಹೀರಾತಿದೆ.

ರಾಜೇಶ ಹೆಗಡೆ ಅಗಸ್ಟ್ ೮ ೨೦೧೫ರಲ್ಲಿ ಈ ಲೇಖನವನ್ನು ವಿಸ್ಮಯಪತ್ರಿಕಾ.ಕಾಂ ಅಲ್ಲಿ ಬರೆದಿದ್ದರು.

ಕೊರೊನಾ ಸಮಯದಲ್ಲಿ ಕಣ್ಮರೆಯಾದ ಕನ್ನಡ

ಒಂದು ಭಾಷೆಯ ಮಹತ್ವ ಹೆಚ್ಚಾಗುವುದು ಅದರ ಬಳಕೆ ಜಾಸ್ತಿ ಆದಾಗ. ಭಾಷೆಯನ್ನು ಆಯಾ ಪ್ರದೇಶಗಳಲ್ಲಿ ದಿನಬಳಕೆಗೆ, ಪ್ರಜೆಗಳ ಅಗತ್ಯಗಳಿಗೆ ಸರಕಾರ ನಡೆಸಲು ಹಾಗೂ ವಿಪತ್ತು ನಿರ್ವಹಣೆಗೆ ಬಳಸಿದರೆ ಅದರ ಘನತೆ ಹೆಚ್ಚುತ್ತದೆ. ಇತ್ತೀಚಿಗೆ ಮನುಕುಲಕ್ಕೆ ಬಂದ ಆಪತ್ತು ಗಳಲ್ಲಿ ಕೊರೊನಾ ಅಲಿಯಾಸ್ ಕೋವಿಡ್-19 ಒಂದು.

ಕನ್ನಡ ನಾಡಿನಲ್ಲಿ ಇದರ ನಿರ್ವಹಣೆಗಾಗಿ ಹೆಚ್ಚು ಬಳಸುವ ಭಾಷೆ ಯಾವುದು? ಕನ್ನಡ? ಅಲ್ಲ!!

ಇಂದು ಬಿಬಿಎಂಪಿ ವಾರ್ ರೂಂ ರಿಪೋರ್ಟ್ ಹೀಗೆ ಹತ್ತು ಹಲವು ವಿಷಯಗಳು ಆಂಗ್ಲ ಭಾಷೆಯಲ್ಲಿವೆ.ಇವೆಲ್ಲವನ್ನೂ ಸಂಪೂರ್ಣವಾಗಿ ಕನ್ನಡದಲ್ಲಿ ಮಾಡಿದ್ದರೆ ಬಿಎಯಂತಹ ಕನ್ನಡ ಡಿಗ್ರಿ ಗೆ ಬೆಲೆ ಬರುತ್ತಿತ್ತು. ಆಸ್ಪತ್ರೆಯಲ್ಲಿ ಬಿಡಿ ವೈದ್ಯಕೀಯ ಶಿಕ್ಷಣ ಆಂಗ್ಲ ಭಾಷೆಯಲ್ಲಿ ಇರುವುದರಿಂದ ಕನ್ನಡ ಅಲ್ಲಿ ಕನಸು.

ಆದರೆ ಕಂಟೇನ್ ಮೆಂಟ್ ಜೋನ್ ಎಚ್ಚರಿಕೆ ಅಥವಾ ವ್ಯಾನ್ ಮೇಲೇ ಕೂಡಾ ಕನ್ನಡಕ್ಕೆ ಜಾಗ ಇಲ್ಲ. ಕೆಲಸಕ್ಕೆ ಬಾರದ ವಿಷಯಗಳನ್ನು ಕನ್ನಡದಲ್ಲಿ ಬರೆದು ಉಪಯುಕ್ತ ಮಾಹಿತಿಯನ್ನು ಇಂಗ್ಲಿಷ್ ಅಲ್ಲೇ ಬರೆಯುವ ಚಾಳಿ ಅನೇಕ ಕಡೆಗಳಲ್ಲಿ ಕಾಣಿಸುತ್ತದೆ.

 ಕನ್ನಡ ಭಾಷೆಯಲ್ಲಿ ಉಪಯುಕ್ತ ಮಾಹಿತಿಯನ್ನು ಕೊಡದಿದ್ದಲ್ಲಿ ಶಿಕ್ಷಣದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ಯಾಕೆ ಕನ್ನಡ ಕಲಿಯಲು ಆಸಕ್ತಿ ವಹಿಸುತ್ತಾರೆ?

ಇನ್ನೂ ಸ್ವಲ್ಪ ದಶಕ ಕಳೆದರೆ ಕನ್ನಡಿಗನೇ ಕನ್ನಡದ ಬೋರ್ಡ್ ಓದಲಾರ. ಯಾಕೆ ಎಂಬುದನ್ನು ನಾನು ವಿವರಿಸಿ ಹೇಳಬೇಕಿಲ್ಲ. ಇಂದು ದಿನಬಳಕೆಯ ಲಕ್ಷಾಂತರ ವಸ್ತುಗಳ ಮೇಲೆ ಕರ್ನಾಟಕದಲ್ಲಿ ಇಂಗ್ಲೀಷ್ ಸಾರ್ವಭೌಮ ಭಾಷೆ!! ರೋಡ್ ರಿಪೇರಿ ಇರಲಿ ಅಥವಾ ಇನ್ನೂ ಹಲವು ಸಂದರ್ಭಗಳಲ್ಲಿ ಕನ್ನಡ ಬಳಕೆ ಶೂನ್ಯ.

ನಮ್ಮಲ್ಲಿ ಹಿಂದಿ ದ್ವೇಷಿಗಳಿದ್ದಾರೆ. ಸಂಸ್ಕೃತ ದ್ವೇಷಿಗಳಿದ್ದಾರೆ. ಕನ್ನಡದಲ್ಲಿ ಯಾರೂ ಬಳಸಲಾಗದ ಪರ್ಯಾಯ ಪದ ಹುಡುಕುವವರು ಇದ್ದಾರೆ. ಆದರೆ ಕನ್ನಡವನ್ನು ಬಳಸಿ ಭಾಷೆಯ ಪ್ರಸ್ತುತತೆ ಹೆಚ್ಚಿಸಬಹುದಾಗಿದ್ದ ಇಂತಹ ಅವಕಾಶವನ್ನು ಕೈ ಚೆಲ್ಲುತ್ತಿದ್ದೇವೆ.

ಇಂದು ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಮಾತ್ರ ಕಲಿಯುತ್ತಿದ್ದಾರೆ. ಕೆಲವು ಕಡೆ ಇಂಗ್ಲಿಷ್ ಅನಿವಾರ್ಯ. ಬರೀ ಕನ್ನಡ ಬಳಸಿದರೂ ನಡೆಯುವ ಕಡೆ ಇಂಗ್ಲಿಷ್ ಬಳಸಿ ಕನ್ನಡ ತುಳಿಯುತ್ತಿರುವದು ಯಾಕೆ? ಅನ್ನುವುದು ಯಕ್ಷ ಪ್ರಶ್ನೆ.

ಈ ಲೇಖನವನ್ನು ರಾಜೇಶ ಹೆಗಡೆ ವಿಸ್ಮಯ ಪತ್ರಿಕಾ.ಕಾಂ ಅಲ್ಲಿ ಅಗಸ್ಟ್ ೯ ೨೦೨೦ರಲ್ಲಿ ಬರೆದಿದ್ದರು.

ಕನ್ನಡದಲ್ಲಿ ಸಹಿ ಹಾಕಿದರೆ ಏನಾಗುತ್ತೆ?

“ಸರ್ ಕನ್ನಡದಲ್ಲಿ ಸೈನ್ ಮಾಡಿದರೆ ಪ್ರಾಬ್ಲಮ್ ಆಗುತ್ತೆ” 

ನಾನು ಕೆಲಸಕ್ಕೆ ಸೇರಿ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ವರ್ಷದ ಕೊನೆಯಲ್ಲಿ ಐಟಿಆರ್ ಅರ್ಜಿ ತುಂಬುವ ಸಮಯ. ಟ್ಯಾಕ್ಸ್ ಅರ್ಜಿ ಅಲ್ಲಿ ನನ್ನ ಸಹಿ ನೋಡಿ ಹೀಗೆ ಎಂದ ಟ್ಯಾಕ್ಸ್ ಕನ್ಸಲ್ಟಂಟ್. 

ಹೋದ ತಿಂಗಳಷ್ಟೇ ಹೊಸ ಪ್ಯಾನ್ ಕಾರ್ಡ್ ಅರ್ಜಿ ಹಾಕುವಾಗ ದೇವನಾಗರಿ ಹಾಗೂ ಕನ್ನಡದಲ್ಲಿ ಸಹಿ ಮಾಡಿರುವ ಕಾರ್ಡ್ ಪಡೆದಿದ್ದೆ. ನನ್ನ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯ್ತು.

ಹಿಂಜರಿಯುತ್ತಲೇ ಕೇಳಿದೆ “ಏನಾಗುತ್ತೆ?” ಕನ್ನಡದಲ್ಲಿ ಸಹಿ ಮಾಡಿದರೆ ಅಫಡವಿಟ್ ಹಾಕಬೇಕು, ಸಾಲ ತೆಗೆದುಕೊಳ್ಳುವಾಗ ಇನ್ನೂ ಹಲವು ಕಡೆ ಅಪ್ಡೇಟ್ ಹಾಕಲೇಬೇಕು. ಸಹಿ ಇಂಗ್ಲಿಷ್ ಅಲ್ಲಿ ಮಾಡಿದ್ರೆ ಈ ಸಮಸ್ಯೆ ಇರಲ್ಲ ಬದಲಾಯಿಸಿಕೊಳ್ಳಿ ಎಂಬ ಉತ್ತರ ಬಂತು. 

ಮನಸ್ಸಿನಲ್ಲಿ ಸ್ವಲ್ಪ ಅಳುಕುಂಟಾದರೂ ಆವಾಗ ಮೊಂಡು ಧೈರ್ಯ ಮಾಡಿ ಹೊಸ ಸಹಿ ಉಳಿಸಿಕೊಂಡೆ. ಈಗ ಆ ನಿರ್ಧಾರ ಸರಿಯಾಗೇ ಇತ್ತು ಎಂದು ಮನವರಿಕೆ ಆಗಿದೆ.

ನನ್ನ ಸಹಿ ಮೊದಲು ಇಂಗ್ಲೀಷ್ ಆಗಿತ್ತು

ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡುವ ಮೊದಲು ನಾನು ಬಳಸುತ್ತಿದ್ದದ್ದು ಇಂಗ್ಲಿಷ್ ಸಹಿಯನ್ನೇ! 10ನೇ ತರಗತಿಗೆ ಅರ್ಜಿಯ ತುಂಬುವಾಗ ಅದಕ್ಕೆ ಸಹಿ ಹಾಕಬೇಕಿತ್ತು. ಅಲ್ಲಿಯವರೆಗೆ ಎಲ್ಲೂ ಸಹಿ ಹಾಕಿರಲಿಲ್ಲ. ಸಹಿ ಹೇಗಿರಬೇಕೆಂಬ ಪರಿಕಲ್ಪನೆ ಸಹ ನನಗೆ ಇರದ ಕಾಲವದು. 

ಪ್ರಾಧ್ಯಾಪಕರ ಬಳಿ ಕೇಳಿದೆ ಹೇಗೆ ಸಹಿ ಮಾಡಲಿ ಎಂದು. ಇಂಗ್ಲಿಷ್ನಲ್ಲಿ ನಿನ್ನ ಹೆಸರನ್ನು ವಿಶಿಷ್ಟ ರೀತಿಯಲ್ಲಿ ಬರಿ. ಅದನ್ನು ಹಾಗೆಯೇ ಎಲ್ಲ ಕಡೆ ಬರೆಯಬೇಕು ಎಂಬ ಮಾರ್ಗದರ್ಶನ ಬಂತು. ಆಗ ಅಲ್ಲಿಯೇ ಒಂದು ಖಾಲಿ ಹಾಳೆಯ ಮೇಲೆ ಇಂಗ್ಲಿಷ್ ಸಹಿಯನ್ನು ಪ್ರಾಕ್ಟಿಸ್ ಮಾಡಿ ಅರ್ಜಿಯಲ್ಲಿ ಸಹಿ ಹಾಕಿದ್ದೆ.

ಕನ್ನಡ ಸಹಿಗೆ ಬದಲಾವಣೆ

ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದಾಗ ಸ್ವಲ್ಪ ಸಮಯದ ನಂತರ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸುವಾಗ ದೇವನಾಗರಿ ಕನ್ನಡ ಮಿಶ್ರಿತ ಸಹಿ ಮಾಡಿದೆ. ಬಹುಶಃ ಕನ್ನಡದಲ್ಲಿ ಸಹಿ ಮಾಡಲು ನನಗೆ ಸ್ಪೂರ್ತಿಯಾಗಿದ್ದು ನಾಗತಿಹಳ್ಳಿ ಚಂದ್ರಶೇಖರ್ ಅವರ ಕನ್ನಡದ ಸಹಿ ಹಾಗೂ ಕನ್ನಡದಲ್ಲಿದ್ದರೆ ತಪ್ಪೇನು ಅನ್ನುವ ಮನೋಭಾವ. 

ಪಾಸ್ಪೋರ್ಟ್ ಅರ್ಜಿ ಸಲ್ಲಿಸುವಾಗ ಆ ಕಚೇರಿಯಲ್ಲಿ ಕುಳಿತವನನ್ನು ಕೇಳಿದೆ ಹೊಸ ಸಹಿ ಹಾಕಬಹುದಾ ಎಂದು. ಪರವಾಗಿಲ್ಲ ಎಂದ. ಕನ್ನಡದಲ್ಲಿ ಹಾಕ ಬಹುದಾ ಎಂದೂ ಕೇಳಿದ ನೆನಪು. ಅದಕ್ಕೂ ಓಕೆ ಎಂಬ ಉತ್ತರ ಸಿಕ್ಕಿತು. ಅಲ್ಲೇ ನನ್ನ ಕ್ರಿಯೇಟಿವಿಟಿ ಬಳಸಿ ಒಂದು ದೇವನಾಗರಿ ಮತ್ತು ಕನ್ನಡ ಮಿಶ್ರಿತ ಸಹಿ ತಯಾರಿಸಿ ಹಾಕಿಯೇ ಬಿಟ್ಟೆ.

 ಆಮೇಲೆ ಪಾಸ್ಪೋರ್ಟ್, ಹೊಸ ಖಾತೆಗಳು ಎಲ್ಲಕಡೆ ಕನ್ನಡ ಸಹಿಯ ಮೆರವಣಿಗೆ ಮುಂದುವರೆಯಿತು. 

ಎದುರಿಸಿದ ಸಮಸ್ಯೆಗಳು

ಈ ಸಹಿಯ ಕಾರಣದಿಂದ ಬ್ಯಾಂಕ್ ಸಾಲ ತೆಗೆದುಕೊಳ್ಳುವಾಗ ಅಫಿಡೆವಿಟ್ ಸಲ್ಲಿಸಬೇಕಾಗಿ ಬಂದಿದೆ. ಆದರೆ ಇದು ದೊಡ್ಡ ಸಮಸ್ಯೆಯೇನಲ್ಲ. ಸಾಮಾನ್ಯವಾಗಿ ಬ್ಯಾಂಕಿನವರು ಇದಕ್ಕೆ ಸಹಾಯ ಮಾಡುತ್ತಾರೆ. ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆ ಇದ್ದರೂ ಕನ್ನಡದಲ್ಲಿ ನನಗೆ ನಿಯಮಗಳನ್ನು ವಿವರಿಸಲಾಗಿದೆ ಎಂದು ನಾನು ಹಲವು ಬಾರಿ ಅಫಿಡವಿಟ್ ಸಲ್ಲಿಸಿದ್ದೇನೆ. ಕೇವಲ ಸಹಿ ಇಂಗ್ಲೀಷ್ ನಲ್ಲಿದೆ ಎಂಬ ಕಾರಣಕ್ಕೆ ಆತನಿಗೆ ಎಲ್ಲಾ ನಿಯಮಗಳು ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎನ್ನುವ ನಿಯಮವೇ ತಪ್ಪು. ಏನಂತೀರಾ?

ಇಂದು ನಾನು ಕೆಲಸ ಮಾಡುವ ಐಟಿ ಕಂಪನಿಗಳಲ್ಲಿ, ನನ್ನ ಕಾಗದ ಪತ್ರಗಳಲ್ಲಿ ನನ್ನ ದೇವನಾಗರಿ ಕನ್ನಡದ ಮಿಶ್ರಿತ ಸಹಿ ಮಾತ್ರ ಬಳಸುತ್ತೇನೆ. ಸಂಪೂರ್ಣ ಕನ್ನಡದಲ್ಲಿ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ. ಆದರೆ ಬೇರೆಯವರು ಸುಲಭವಾಗಿ ನಕಲು ಮಾಡಬಾರದು ಎಂಬ ಉದ್ದೇಶದಿಂದ ದೇವನಾಗರಿ ಲಿಪಿ ಸೇರಿಸಿದೆ.

ನನ್ನ ವಿದೇಶಿ ಪ್ರಯಾಣಕ್ಕೆ ಅಥವಾ ಮಲ್ಟಿ ನ್ಯಾಶನಲ್ ಐಟಿ ಕಂಪನಿಗಳಲ್ಲಿ ಕೆಲಸ ಮಾಡಲು ಈ ಕನ್ನಡ ಸಹಿಯಿಂದ ಯಾವುದೇ ತೊಂದರೆಯೂ ಆಗಿಲ್ಲ! ಕೆಲಸದಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ನಿಷ್ಠೆ ಇವು ನಿಮಗೆ ಮುಖ್ಯ ಹೊರತು ಭಾಷೆ ಅಲ್ಲ.

ಕನ್ನಡ ಸಹಿಗೆ ಸಲಹೆಗಳು

ಕನ್ನಡದಲ್ಲಿ ಸಹಿ ಹಾಕುವಾಗ ಈ ಮುಂದಿನ ವಿಚಾರ ನಿಮ್ಮ ಗಮನದಲ್ಲಿರಲಿ.

  • ಸ್ವಲ್ಪ ನಿಮ್ಮ ಕ್ರಿಯಾಶೀಲತೆಯಿಂದ ಸ್ವಂತ ರೀತಿಯ ಸಹಿಯನ್ನು ಮಾಡಿ. ನೇರವಾಗಿ ಕನ್ನಡದಲ್ಲಿ ನಿಮ್ಮ ಹೆಸರನ್ನು ಬರೆಯಬೇಡಿ. ತಲೆ ಗೊಟ್ಟು ಹಾಗೂ ಒತ್ತಿನಲ್ಲಿ ನಿಮ್ಮತನ ಇರಲಿ. ಆಗ ನಕಲು ಮಾಡುವುದು ಕಷ್ಟ.
  • ದೇವ ನಾಗರಿ ಅಥವಾ ಇಂಗ್ಲಿಷ್ ಲಿಪಿ ಬಳಸಿ ಸುಲಭವಾಗಿ ಕಾಪಿ ಮಾಡದಂತೆ ಟ್ವಿಸ್ಟ್ ಸಹ ಮಾಡಬಹುದು.
  • ನೀವು ಚಿತ್ರಕಾರರಾಗಿದ್ದರೆ ಕನ್ನಡದಲ್ಲಿ ಸಹಿ ಮಾಡಿ. ನೆನಪಿಡಿ ನಿಮ್ಮ ಪ್ರತಿಭೆ ನಿಮ್ಮ ಚಿತ್ರದ ಮೌಲ್ಯವನ್ನು ನಿರ್ಧರಿಸುತ್ತದೆ ಹೊರತು ಸಹಿಯ ಭಾಷೆಯಲ್ಲ.

ಕನ್ನಡ ಭಾಷೆಯಲ್ಲಿಯೂ ವಿಶಿಷ್ಟಪೂರ್ಣ ಸುಂದರ ಸಹಿಯನ್ನು ಮಾಡಲು ಸಾಧ್ಯವಿದೆ.ನೀವು ಮನಸ್ಸು ಮಾಡಬೇಕು ಅಷ್ಟೆ.

ಸಹಿ ಸಂಕ್ಷಿಪ್ತವಾಗಿದ್ದು ಚಿಕ್ಕದಾಗಿರಲಿ ಎಲ್ಲ ಕಡೆ ತೀರ ದೊಡ್ಡದಾಗಿ ಸಹಿ ಮಾಡಲು ಜಾಗ ಇರುವುದಿಲ್ಲ.

ಕೊನೆಯ ಮಾತು

ಈ ಲೇಖನ ಒಬ್ಬ ಕನ್ನಡಿಗನಿಗೆ ಕನ್ನಡದಲ್ಲಿ ಸಹಿ ಮಾಡಿ ಬಳಸಲು ಸ್ಪೂರ್ತಿ ಆದರೆ ಸಾರ್ಥಕ ಅಂದು ಕೊಳ್ಳುತ್ತೇನೆ.

ಕನ್ನಡದಲ್ಲಿ ಸಹಿ ಮಾಡುವದರಿಂದ ಕನ್ನಡ ಏನು ಭಾರಿ ಉದ್ಧಾರ ಆಗುತ್ತಾ? ಎಂದು ನಿಮಗೆ ಅನ್ನಿಸಬಹುದು. ಕನ್ನಡದ ಸಹಿ ನಮ್ಮ ಕನ್ನಡ ಭಾಷೆಗೆ ಇರುವ ಬೆಂಬಲದ ಪ್ರತೀಕ. ಯಾವ ಭಾಷೆಯಲ್ಲಿ ಸಹಿ ಮಾಡಿದರೂ ಆಗುತ್ತೆ ಅನ್ನುವಾಗ ಆ ಭಾಷೆ ಕನ್ನಡವೇ ಯಾಕಾಗಿರಬಾರದು? ಅಲ್ವರಾ?

ನಮ್ಮ ಕನ್ನಡದ ಭಾಷೆಯ ಪ್ರತಿಷ್ಠಾಪನೆ ಪ್ರತಿ ಹಂತದಲ್ಲಿ ನಡೆಯಬೇಕು. ಕನ್ನಡದಲ್ಲಿ ಸಹಿ ಹಾಕುವುದು ಕೂಡಾ ಒಂದು ಹೆಜ್ಜೆ ಅನ್ನಬಹುದು ಏನಂತೀರಾ? 

ನಿಮ್ಮ ಅನಿಸಿಕೆ ತಿಳಿಸಿ.

ಸೂಚನೆ: ವಿಸ್ಮಯಪತ್ರಿಕಾ.ಕಾಂ ಅಲ್ಲಿ ಈ ಲೇಖನ  ಅಗಸ್ಟ್ ೨೩, ೨೦೨೦ ರಂದು ಪ್ರಕಟ ಆಗಿತ್ತು.

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ